BREAKING NEWSDHARWADHubballiPolitical news

ಶೆಟ್ಟರ್ “ರಾಜಕೀಯಕ್ಕೆ” ಟೆಂಗಿನಕಾಯಿ ಕಂಗಾಲು!

Shetter vs tenginkai!

POWERCITY NEWS : HUBLI

ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದಲ್ಲಿ ಟೆಂಡರ್ ಹಂತದಲ್ಲಿರುವ ಕೋಟ್ಯಾಂತರ ರೂಪಾಯಿ ರಸ್ತೆ, ಸೇತುವೆ ಕಾಮಗಾರಿಯನ್ನು ಹಿಂದಿನ ಶಾಸಕರು ತಮ್ಮ ಪ್ರಭಾವ ಬಳಸಿ, ಕಾಮಗಾರಿಯನ್ನು ಸ್ಥಗಿತಗೊಳಿಸಿ, ಅಭಿವೃದ್ಧಿ ಕಾಮಗಾರಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ವಿಪ ಸದಸ್ಯ ಜಗದೀಶ್ ಶೆಟ್ಟರ್ ವಿರುದ್ಧ ಶಾಸಕ ಮಹೇಶ ಟೆಂಗಿನಕಾಯಿ ಗಂಭೀರವಾಗಿ ಆರೋಪಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದಲ್ಲಿ 43 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಸಲು ಅನುಮೋದನೆ ದೊರೆತ್ತಿತ್ತು. ಇದೀಗ ಸರ್ಕಾರ 30 ಕೋಟಿ ವೆಚ್ಚದ ಕಾಮಗಾರಿಯನ್ನು ಸ್ಥಗಿತಗೊಳಿಸಲು ಪತ್ರ ಕಳಿಸಿದೆ. ಇದರ ಹಿಂದೆ ಮಾಜಿ ಶಾಸಕರ ಕೈವಾಡ ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ದಾಖಲೆ ಸಮೇತವಾಗಿ ಮಾಧ್ಯಮಕ್ಕೆ ಮಾಹಿತಿ ನೀಡುವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದ್ಯ ಅನುದಾನ ನೀಡಲು ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ಪ್ರಯೋಜನ ಆಗಿಲ್ಲ, ಹಿರಿಯ ಅಧಿಕಾರಿಗಳು ಈ ಬಗ್ಗೆ ತಿಳಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಇದು ನಗರದ ಅಭಿವೃದ್ಧಿಗೆ ಮಾರಕವಾಗಲಿದೆ. ಈ ಬಗ್ಗೆ ಬರುವ ದಿನಗಳಲ್ಲಿ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವೆ. ಇದಲ್ಲದೇ ಹೋರಾಟ ಮಾಡಲಾಗುವುದು. ಕಾದು ನೋಡಿ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕನಾಗಿ ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ಜೊತೆಗೆ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಸುಮಾರು 25 ಪ್ರಶ್ನೆಗಳನ್ನು 31 ಇಲಾಖೆಗೆ ಕೇಳಿದ್ದೆ, ಅದರಲ್ಲಿ ಸರ್ಕಾರ 3 ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರಿಸಲು ತಿರಸ್ಕರಿಸಿದೆ ಎಂದರು.

ನಗರದಲ್ಲಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ಉಳಿವಿಗಾಗಿ ಧ್ವನಿ ಎತ್ತಿದಕ್ಕೆ ಸರ್ಕಾರ ಸ್ಪಂದಿಸಿದ್ದು, ಮೈಸೂರಿಗೆ ಸ್ಥಳಾಂತರ ಮಾಡುವುದನ್ನು ಕೈಬಿಟ್ಟಿದೆ. ಇದನ್ನು ಸದನದಲ್ಲಿ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಆದರೆ ಅನುದಾನ ವಿಷಯದಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡಿದರು. ಈ ಬಗ್ಗೆ ಕೂಡಾ ಸಚಿವರಿಗೆ ಸ್ಪಷ್ಟ ಅಂಕಿಅಂಶಗಳನ್ನು ನೀಡಲಾಗಿದೆ. ಅನುದಾನ ನೀಡುವ ಭರವಸೆ ನೀಡಲಾಗಿದೆ. ಕಂದಾಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆಯ ನಡುವಿನ ಹೊಂದಾಣಿಕೆವಿಲ್ಲದ ಸಂಗೀತ ವಿಶ್ವವಿದ್ಯಾಲಯ ನಿರ್ವಹಿಸಲು ಕಷ್ಟವಾಗಿದೆ. ಇದೀಗ ಕನ್ನಡ ಸಂಸ್ಕೃತಿ ಇಲಾಖೆಗೆ ವಿಶ್ವವಿದ್ಯಾಲಯ ಸೇರ್ಪಡೆಗೆ ಸಚಿವ ಶಿವಾರಾಮ ತಂಗಡಗಿ ಅವರಿಗೆ ಮಾತನಾಡಿದ್ದೇನೆ. ಅವರು ಸಕಾರಾತ್ಮಕ ಸ್ಪಂದನೆ ಕೊಟ್ಟಿದ್ದಾರೆ ಎಂದರು‌.

ಇದಲ್ಲದೇ ಸದನದಲ್ಲಿ ಹುಬ್ಬಳ್ಳಿ ರಿಜಿನಲ್ ಕ್ಯಾನ್ಸರ್ ಸೆಂಟರ್ (ಆರ್.ಸಿ.ಸಿ) ಮಾಡಲು ಒತ್ತಾಯ ಮಾಡಿದ್ದೇನೆ. ಇದಕ್ಕೆ ಸ್ಪೀಕರ್ ಅವರೇ ಪ್ರಶಂಸೆ ವ್ಯಕ್ತಪಡಿಸಿ ಹುಬ್ಬಳ್ಳಿ ಹಾಗೂ ಮಂಗಳೂರಿಗೆ ಆರ್’ಸಿಸಿ ಮಾಡಲು ತಿಳಿಸಿದ್ದಾರೆ. ಇದಕ್ಕೆ ಸಚಿವ ಶರಣಪ್ರಕಾಶ ಅವರು ಫೈನಾನ್ಸ್ ಇಲಾಖೆಗೆ ಕಳಿಸುವ ಭರವಸೆ ನೀಡಿದ್ದಾರೆ. ಇದರ ಜತೆಗೆ ಮುಮ್ಮಿಗಟ್ಟಿಯಲ್ಲಿ ಎಫ್ ಎಮ್ ಸಿಜಿ ಕ್ಲಸ್ಟರ್ ಆರಂಭಕ್ಕೆ ಒತ್ತಾಯಿಸಿದ್ದೇನೆ. ಇದು ಆರಂಭ ಆದ್ದಲ್ಲಿ ನಗರದ ಆರಂಭದ ದೃಷ್ಟಿಯಿಂದ ಉತ್ತಮ ಕಾರ್ಯಗಳಾಗಲಿವೆ ಎಂದರು.

ಬಿಯಾಂಡ್ ಬೆಂಗಳೂರು ಕೇವಲ ಬಾಯಲ್ಲಿ ಮಾತ್ರ ಉಳಿದಿದೆ. ಅದು ಕಾರ್ಯರೂಪಕ ಬರುತ್ತಿಲ್ಲ. ನಗರದಲ್ಲಿನ ಪ್ಲೈಓವರ್ ಕಾಮಗಾರಿಗಳು ಪೂರ್ಣಗೊಳಬೇಕಿತ್ತು. ಆದರೆ ಇದೀಗ ಶೇ.40 ರಷ್ಟು ಮಾತ್ರ ಆಗಿವೆ.‌ ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರವಿ ನಾಯಕ ಇದ್ದರು.

Related Articles

Leave a Reply

Your email address will not be published. Required fields are marked *

Back to top button